Powered By Blogger

Monday, 16 December 2013

ಸ್ಥಿಮಿತ ಕಳಕೊಳ್ಳುವ ಹೆತ್ತವರು ಮತ್ತು ನಂಬಿಕೆ ಕಳಕೊಳ್ಳದ ಮಕ್ಕಳು

ಸ್ಥಿಮಿತ ಕಳಕೊಳ್ಳುವ ಹೆತ್ತವರು ಮತ್ತು ನಂಬಿಕೆ ಕಳಕೊಳ್ಳದ ಮಕ್ಕಳು

ಈ ಸುದ್ದಿಗಳನ್ನು ಓದಿ
1. 14 ವರ್ಷದ ಮಗಳು ಅರುಷಿಯನ್ನು ಕೊಂದ ಅಪರಾಧಕ್ಕಾಗಿ ಆಕೆಯ ಹೆತ್ತವರಾದ ರಾಜೇಶ್ ಮತ್ತು ನೂಪುರ್ ತಲ್ವಾರ್ ದಂಪತಿಗೆ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ.
2. ಕೌಟುಂಬಿಕ ದ್ವೇಷದ ಹಿನ್ನೆಲೆಯಲ್ಲಿ ತನ್ನ 10 ಮತ್ತು 14 ವರ್ಷದ ಮಕ್ಕಳನ್ನು ಕೊಂದ ಬ್ಯಾಂಕ್ ಮ್ಯಾನೇಜರ್ ರಮೇಶ್ ನಾಯ್ಕನಿಗೆ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿದೆ.
3. ಮೂರನೇ ಹೆರಿಗೆಯಲ್ಲೂ ಅವಳಿ ಹೆಣ್ಣು ಮಕ್ಕಳಾದ ದುಃಖದಿಂದ ಬಡ ಕುಟುಂಬವೊಂದು ನವಜಾತ ಶಿಶುಗಳನ್ನು ಪರಭಾರೆ ಮಾಡಿ ಬಂಧನಕ್ಕೀಡಾಗಿದ್ದಾರೆ..  
ಕಳೆದೆರಡು ವಾರಗಳಲ್ಲಿ ಪ್ರಕಟವಾದ ಈ ಮೂರೂ ಸುದ್ದಿಗಳಲ್ಲಿ ಒಂದು ಪ್ರಮುಖ ಹೋಲಿಕೆ ಯಿದೆ. ಅದೇನೆಂದರೆ, ಈ ಮೂರರಲ್ಲೂ ಮಕ್ಕಳೇ ನಾಯಕರು. ಹೆತ್ತವರೇ ಖಳನಾಯಕರು. ನಿಜವಾಗಿ, ಇನ್ನೂ ಪ್ರೌಢಾವಸ್ಥೆಗೆ ತಲುಪದ ಪುಟ್ಟ ಮಕ್ಕಳು ಈ ಜಗತ್ತಿನಲ್ಲಿ ಖಳರಾದದ್ದು ಇಲ್ಲವೇ ಇಲ್ಲ. ಹಾಗಂತ ಖಳರಾಗುವುದಕ್ಕೆ ಬೇಕಾದ ಅವಕಾಶ ಅಥವಾ ಉಪಕರಣಗಳು ಅವರ ಮುಂದೆ ಇರಲಿಲ್ಲ ಎಂದಲ್ಲ. ಎಲ್ಲವೂ ಇತ್ತು. ಚೂರಿ, ಕತ್ತಿ, ಕಲ್ಲು.. ಮತ್ತಿತರ ಅಪಾಯಕಾರಿ ವಸ್ತುಗಳು ಮನೆಯಲ್ಲಿ ಮಕ್ಕಳ ಕೈಗೆಟಕುವ ರೀತಿಯಲ್ಲೇ ಇರುತ್ತದೆ. ಅಪ್ಪ ಸಿಟ್ಟಿನಿಂದ ಥಳಿಸಿದಾಗ ಮಕ್ಕಳು ಚೂರಿಯ ಮೂಲಕ ಪ್ರತಿಕ್ರಿಯಿಸುವುದಕ್ಕೆ ಅವಕಾಶ ಇರುತ್ತದೆ. ತಾಯಿಯ ಬೈಗುಳ, ಗದರಿಕೆಗೆ ಪ್ರತಿಕ್ರಿಯೆಯಾಗಿ ಮಕ್ಕಳು ಕಲ್ಲೆಸೆಯುವುದಕ್ಕೂ ಅವಕಾಶ ಇದೆ. ಅಲ್ಲದೇ ಅನೇಕ ಬಾರಿ ಹೆತ್ತವರು ಮಕ್ಕಳನ್ನು ತಪ್ಪಾಗಿಯೇ ದಂಡಿಸುತ್ತಾರೆ. ಆದರೆ ತಪ್ಪನ್ನು ಒಪ್ಪಿಕೊಳ್ಳುವುದು ಅವರಿಗೆ ಗೊತ್ತೇ ಹೊರತು, ದೊಡ್ಡವರಂತೆ ಅದನ್ನು ಜಾಣ್ಮೆಯಿಂದ ಸಮರ್ಥಿಸಿಕೊಳ್ಳುವುದು ಗೊತ್ತಿರುವುದಿಲ್ಲ. ತಮ್ಮ ಕೃತ್ಯವನ್ನು ಮನದಟ್ಟಾಗುವಂತೆ ವಿವರಿಸುವ ಕಲೆಯೂ ಅವರಿಗೆ ಕರಗತವಾಗಿರುವುದಿಲ್ಲ. ಆದರೂ, ಮಕ್ಕಳು ತಮ್ಮ ಹೆತ್ತವರನ್ನು ದ್ವೇಷಿಸುವುದಿಲ್ಲ. ಅಪಾಯಕಾರಿ ಅಸ್ತ್ರಗಳನ್ನು ಎತ್ತಿಕೊಂಡು ಹಗೆ ಸಾಧಿಸುವುದಿಲ್ಲ. ಯಾಕೆ ಹೀಗೆ ಅಂದರೆ, ಮಕ್ಕಳಿಗೆ ಹೆತ್ತವರ ಮೇಲೆ ಅಪಾರ ನಂಬಿಕೆಯಿರುತ್ತದೆ. ಹೆತ್ತವರು ಎಂದೂ ತಮ್ಮ ಜೊತೆಗಿರುತ್ತಾರೆ ಅನ್ನುವ ಭರವಸೆಯೊಂದಿಗೆ ಅವು ಬದುಕುತ್ತವೆ. ಹೀಗಿರುವಾಗ ಹೆತ್ತವರೇ ಮಕ್ಕಳ ಹಂತಕರಾಗುವುದನ್ನು ಹೇಗೆ ವ್ಯಾಖ್ಯಾನಿಸುವುದು? ಯಾರಾದರೂ ತಂಟೆ ಮಾಡಿದರೆ ಮಕ್ಕಳು ಓಡೋಡಿ ಬರುವುದು ಹೆತ್ತವರ ಬಳಿಗೆ. ಶಾಲೆಯಲ್ಲಿ ಶಿಕ್ಷಕರು ಗದರಿಸಿದರೆ, ಗೆಳೆಯರು ಜಗಳ ಕಾಯ್ದರೆ, ಟಿಫಿನ್ ತಿನ್ನಲಾಗದಿದ್ದರೆ.. ಎಲ್ಲವನ್ನೂ ಮಕ್ಕಳು ಹೆತ್ತವರ ಜೊತೆಯೇ ಹಂಚಿಕೊಳ್ಳುತ್ತಾರೆ. ಇಂಥದ್ದೊಂದು ಪ್ರೀತಿ, ನಂಬಿಕೆಯ ಸಂಬಂಧವೊಂದು ಬಿರುಕು ಬಿಡುತ್ತಿರುವುದೇಕೆ? ಇವತ್ತಿನ ದಿನಗಳಲ್ಲಿ ಇಂಥ ಪ್ರಕರಣಗಳು ತೀರಾ ಅಪರೂಪದ್ದಾಗಿಯೂ ಉಳಿದಿಲ್ಲ. ಯಾವ ಊರಲ್ಲೂ ಯಾವ ಸಂದರ್ಭದಲ್ಲೂ ಘಟಿಸಬಹುದಾದ ಮಾಮೂಲಿ ಪ್ರಕರಣದ ಸ್ಥಿತಿಗೆ ಇವು ತಲುಪಿ ಬಿಟ್ಟಿವೆ. ಕಚೇರಿಯಲ್ಲೋ ವ್ಯವಹಾರದಲ್ಲೋ ಆಗಿರುವ ಆಘಾತದ ಸಿಟ್ಟನ್ನು ಎಷ್ಟೋ ಹೆತ್ತವರು ತಮ್ಮ ಮಕ್ಕಳ ಮೇಲೆ ತೀರಿಸಿಕೊಳ್ಳುವುದಿದೆ. ಮಕ್ಕಳಿಗೆ ಅದನ್ನು ಪ್ರಶ್ನಿಸುವ ಸಾಮಥ್ರ್ಯ ಇಲ್ಲದಿರುವುದರಿಂದಷ್ಟೇ ಹೆಚ್ಚಿನವು ಸುದ್ದಿಗೊಳಗಾಗುವುದಿಲ್ಲ.  
ಕೌಟುಂಬಿಕ ಕಲಹಗಳು ಆಘಾತಕಾರಿ ಮಟ್ಟದಲ್ಲಿ ಹೆಚ್ಚುತ್ತಿರುವ ದಿನಗಳಿವು. ದೊಡ್ಡ ಕುಟುಂಬಗಳು ಅಣು ಕುಟುಂಬಗಳಾಗಿ ಬದಲಾಗುತ್ತಿವೆ. ಒಂದು ಕಡೆ ಬದುಕು ತುಟ್ಟಿಯಾಗುತ್ತಿದ್ದರೆ ಇನ್ನೊಂದೆಡೆ ಆಧುನಿಕ ಜೀವನ ಕ್ರಮಗಳು ಬಲವಾಗಿ ಆಕರ್ಷಿಸುತ್ತಿವೆ. ಅವುಗಳ ಆಕರ್ಷಣೆಯಿಂದ ತಪ್ಪಿಸಿಕೊಂಡು ಬದುಕಲಾಗದಷ್ಟು ಅವು ಅನಿವಾರ್ಯ ಅನ್ನಿಸಿಕೊಳ್ಳುತ್ತಿವೆ. ಇವುಗಳ ನಡುವೆ ಸಮ ತೋಲನ ಕಾಯ್ದುಕೊಳ್ಳುವುದು ಅನೇಕ ಸಂದರ್ಭಗಳಲ್ಲಿ ಸಾಧ್ಯವಾಗುತ್ತಿಲ್ಲ. ಪತಿ-ಪತ್ನಿಯರ ನಡುವೆ ಜಗಳ, ವಿವಾಹ ವಿಚ್ಛೇದನ, ಅನಾಥ ಮಕ್ಕಳ ಪ್ರಕರಣಗಳು ಹೆಚ್ಚಾಗುತ್ತಿವೆ. ಪತಿ ಮತ್ತು ಪತ್ನಿಯ ಮೇಲೆ ಇವತ್ತಿನ ಜೀವನ ಕ್ರಮಗಳು ಹೆಚ್ಚುವರಿ ಹೊರೆಯನ್ನು ಹೊರಿಸುತ್ತಿರುವುದರಿಂದ ಮನಶ್ಶಾಂತಿ ಕಡಿಮೆಯಾಗುತ್ತಿದೆ. ತೀರಾ ಸಹನೆಯಿಂದ ಪ್ರತಿಕ್ರಿಯಿಸಬಹುದಾದ ಸಣ್ಣ ಪ್ರಕರಣಗಳೂ ರಾದ್ಧಾಂತಕ್ಕೆ ಕಾರಣವಾಗುತ್ತಿವೆ. ಈ ಹಿನ್ನೆಲೆಯಲ್ಲಿ ನೆಮ್ಮದಿಯ ಮನೆಗಳನ್ನು ನಿರ್ಮಿಸುವ ಬಗ್ಗೆ ಗಂಭೀರ ಚರ್ಚೆಗಳು ನಡೆಯಬೇಕಿದೆ. ಒಂದು ಮನೆಯಲ್ಲಿ ಪತಿಯ ಜವಾಬ್ದಾರಿ, ಪತ್ನಿಯ ಹೊಣೆಗಾರಿಕೆ, ಮಕ್ಕಳ ತರಬೇತಿ, ಹಿರಿಯರ ಸ್ಥಾನ-ಮಾನ.. ಎಲ್ಲವುಗಳನ್ನೂ ಅವಲೋಕನಕ್ಕೆ ಒಳಪಡಿಸುವ ವಾತಾವರಣವನ್ನು ಬೆಳೆಸಬೇಕಿದೆ. ಯಾಕೆಂದರೆ, ಇವತ್ತು ಹೊಟ್ಟೆಗೆ ಮತ್ತು ಬಟ್ಟೆಗೆ ತೊಂದರೆ ಇಲ್ಲದ ಮನೆಗಳಿಂದಲೇ ಹೆಚ್ಚೆಚ್ಚು ಆಘಾತಕಾರಿ ಸುದ್ದಿಗಳು ಕೇಳಿಬರುತ್ತಿವೆ. ನೆಮ್ಮದಿ ಕಳಕೊಳ್ಳುತ್ತಿರುವ ಮನೆಗಳಲ್ಲಿ ಹೆಚ್ಚಿನವು ಮಧ್ಯಮ ಮತ್ತು ಶ್ರೀಮಂತವಾದವೇ. ಒಂದು ರೀತಿಯಲ್ಲಿ, ಟಿ.ವಿ. ಮತ್ತು ಇಂಟರ್‍ನೆಟ್‍ಗಳು ನವಪೀಳಿಗೆಯಲ್ಲಿ ಹೊಸ ಹೊಸ ಕನಸುಗಳನ್ನು ಬಿತ್ತುತ್ತಿವೆ. ಹೊಸ ಹೊಸ ವಿಚಾರಗಳನ್ನು ರೂಪಿಸುತ್ತಿವೆ. ಅವುಗಳಿಂದ ಪ್ರಭಾವಿತಗೊಳ್ಳುವ ಪೀಳಿಗೆಯು ತಪ್ಪು ಹೆಜ್ಜೆಯಿರಿಸುವುದಕ್ಕೂ ಅವಕಾಶ ಇದೆ. ಮಕ್ಕಳಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಸೂಕ್ಷ್ಮವಾಗಿ ಗಮನಿಸಬೇಕಾದ ಮತ್ತು ತಿದ್ದಬೇಕಾದ ಹೆತ್ತವರು ಅದು ಬಿಟ್ಟು ಜೀವನ ಸೌಲಭ್ಯವನ್ನು ಹೆಚ್ಚಿಸುವ ಭರದಲ್ಲಿ ಬಿಝಿಯಾಗಿರುತ್ತಾರೆ. ಹೀಗೆ ತಾಳ ತಪ್ಪಿದ ವಾತಾವರಣದಲ್ಲಿ ಕೊನೆಗೆ ಅಸಹನೆ, ಆಕ್ರೋಶಗಳೇ ಮೇಲುಗೈ ಪಡೆಯುವ ಸಾಧ್ಯತೆಯೂ ಇರುತ್ತದೆ.  
- ಎ.ಕೆ ಕುಕ್ಕಿಲ, (ಸಂಪಾದಕೀಯ, ಸನ್ಮಾರ್ಗ ವಾರಪತ್ರಿಕೆ)
ಮಕ್ಕಳು ಮತ್ತು ಹೆತ್ತವರು ಎರಡು ಬೇರೆ ಬೇರೆ ಧ್ರುವಗಳಲ್ಲ. ಪರಸ್ಪರ ಅವಲಂಬಿತರು. ಮಕ್ಕಳಿಲ್ಲದ ಬದುಕನ್ನು ನಿರೀಕ್ಷಿಸಲು ಹೇಗೆ ಒಂದು ಕುಟುಂಬಕ್ಕೆ ಸಾಧ್ಯವಿಲ್ಲವೋ ಹಾಗೆಯೇ ಹೆತ್ತವರು ಇಲ್ಲದಿರುವ ಒಂದು ಬದುಕನ್ನು ನಿರೀಕ್ಷಿಸಲು ಮಕ್ಕಳಿಗೂ ಸಾಧ್ಯವಿಲ್ಲ. ಇಲ್ಲಿಯ ಸಂಬಂಧ ಭಾವಪೂರ್ಣವಾದದ್ದು. ಪರಸ್ಪರ ಭರವಸೆ, ನಂಬಿಕೆ, ಪ್ರೀತಿಯ ತಳಹದಿಯಲ್ಲಿ ಕಟ್ಟಲಾದದ್ದು. ಅಂಥ ಸಂಬಂಧಗಳು ಬಿರುಕು ಬಿಡದಂತೆ ಕಾಪಾಡಿಕೊಳ್ಳಬೇಕಾದ ಅಗತ್ಯ ಬಹಳವಿದೆ. ಹೆತ್ತವರನ್ನು ಹಂತಕರಂತೆ ಭೀತಿಯಿಂದ ನೋಡುವ ಮಕ್ಕಳು ಮತ್ತು ಮಕ್ಕಳನ್ನು ಕೊಲೆಗೆ ಅರ್ಹರೆಂಬಂತೆ ನೋಡುವ ಹೆತ್ತವರು ಸಮಾಜದಲ್ಲಿ ಬೆಳೆಯತೊಡಗಿದರೆ ಅದಕ್ಕಿಂತ ಭೀತಿಯ ಸನ್ನಿವೇಶ ಇನ್ನೊಂದಿಲ್ಲ. ಆದ್ದರಿಂದ ಬದುಕಿನ ಜಂಜಾಟದ ಮಧ್ಯೆಯೂ ಸ್ಥಿಮಿತವನ್ನು ಕಳಕೊಳ್ಳದ ಕುಟುಂಬಗಳು ನಿರ್ಮಾಣಗೊಳ್ಳುವಂತೆ ನೋಡಿಕೊಳ್ಳಬೇಕಾಗಿದೆ. ಮಕ್ಕಳು, ಹೆತ್ತವರು, ಹಿರಿಯರು ನೆಮ್ಮದಿಯಾಗಿ ಬದುಕುವ ‘ಮನೆಗಳ’ ನಿರ್ಮಾಣಕ್ಕೆ ಒತ್ತು ಸಿಗಬೇಕಿದೆ. ಇಲ್ಲದಿದ್ದರೆ, ಹಂತಕ ಹೆತ್ತವರಂತೆ ಹಂತಕ ಮಕ್ಕಳೂ ಸೃಷ್ಟಿಯಾದಾರು.

Sunday, 24 November 2013

ಗಂಡ ಹೆಂಡತಿ ವಿರಸಕ್ಕೆ ಐದು ಕಾರಣಗಳು

ಲಂಡನ್(ಜೂ.01): ಸಾವಿಲ್ಲದ ಮನೆಯಿಂದ ಸಾಸಿವೆ ತರಲು ಸಾಧ್ಯವಿಲ್ಲ ಅಲ್ಲವೇ? ಹಾಗೆಯೇ, ಜಗಳವಾಡದ ದಂಪತಿ ಈ ಪ್ರಪಂಚದಲ್ಲೇ ಇಲ್ಲ. ಹಲವು ವರ್ಷ ಒಟ್ಟಿಗೆ ಬದುಕು ಸವೆಸುವಾಗ ಸಣ್ಣಪುಟ್ಟ ಘರ್ಷಣೆಗಳಾಗುವುದು ತೀರಾ ಸಹಜ. ಮನೆಯ ಕೆಲಸದ ವಿಷಯದಿಂದ ಹಿಡಿದು, ಮಕ್ಕಳು, ಟಿವಿ, ದುಡ್ಡು ಮೊದಲಾದ ವಿಷಯಗಳಿಗೆ ಗಂಡ ಮತ್ತು ಹೆಂಡತಿಯ ಮಧ್ಯೆ ಭಿನ್ನಾಭಿಪ್ರಾಯ ಮತ್ತು ಮುನಿಸು-ಜಗಳಗಳು ನಡೆಯುತ್ತಲೇ ಇರುತ್ತವೆ...

ಸಂಗಾತಿಯ ಯಾವ ಗುಣಗಳು ಇಷ್ಟವಾಗುವುದಿಲ್ಲ ಎಂಬ ಬಗ್ಗೆ ಡಾ| ಬೆಕ್ಮನ್ ಎಂಬುವವರು ಒಂದು ದೊಡ್ಡ ಸಮೀಕ್ಷೆಯನ್ನೇ ಮಾಡಿದ್ದಾರೆ. ಸುಮಾರು 2 ಸಾವಿರ ಜನರ ಅಭಿಪ್ರಾಯ ಕಲೆಹಾಕಿ ಕೆಲವು ಮಹತ್ವದ ವಿಷಯಗಳನ್ನ ಹೊರಗೆಡವಿದ್ದಾರೆ. ಆ ಮಾಹಿತಿ ನಮ್ಮ ಭಾರತೀಯರಿಗೂ ಮಹತ್ವದ್ದೇ ಆಗಿದೆ.

ಮೊದಲಿಗೆ, ಹೆಣ್ಣಿನ ಯಾವ ಗುಣಗಳು ಗಂಡಿಗೆ ಕಿರಿಕಿರಿಯಾಗುತ್ತದೆ ಎಂಬುದನ್ನ ನೋಡೋಣ.....

1) ಚೆನ್ನಾಗೇ ಇದ್ದೀನಿ
ಮಹಿಳೆಯರು ಮುಚ್ಚಿಡುವುದರಲ್ಲಿ ಸಿದ್ಧಹಸ್ತರು... ಮನಸಿಗೆ ಬೇಜಾರಾದಾಗ ಅದು ಅವರ ಮುಖದಲ್ಲಿ ವ್ಯಕ್ತವಾಗುತ್ತಿರುತ್ತದೆ. ಆದರೆ, ಏನು ಸಮಸ್ಯೆ ಎಂದು ಗಂಡ ಕೇಳಿದಾಗ ಆಕೆ, ಏನೂ ಸಮಸ್ಯೆ ಇಲ್ಲ ಎಂದೇ ಉತ್ತರಿಸುತ್ತಾಳೆ. ಇದು, ಗಂಡಿಗೆ ತೀರಾ ಕಿರಿಕಿರಿಯಾಗುತ್ತದೆ.. ಹೆಣ್ಣಿನ ಈ ಗುಣವನ್ನ ಸಮೀಕ್ಷೆಯಲ್ಲಿ ಭಾಗವಹಿಸಿದ ಶೇ.40ರಷ್ಟು ಗಂಡಸರು ಇಷ್ಟಪಡುವುದಿಲ್ಲ.

ಹೆಂಗಸರಿಗೆ ತಮ್ಮ ಭಾವನೆಗಳನ್ನ ನೇರಾನೇರವಾಗಿ ಹೊರಹಾಕಲು ಕಷ್ಟಸಾಧ್ಯ. ಹೀಗಾಗಿ, ಅವರು ಇಂಥ ನಿರ್ಲಕ್ಷ ಧೋರಣೆಯನ್ನ ಅನುಸರಿಸುತ್ತಾರಂತೆ. ಅಷ್ಟೇ ಅಲ್ಲ, ತನ್ನ ಸಂಗಾತಿಯು ಅವರಾಗೇ ಮನಸನ್ನ ಅರಿತುಕೊಳ್ಳಲಿ ಎಂದು ಹೆಣ್ಣು ಬಯಸುತ್ತಾಳೆ. ಹೀಗಾಗಿ, ಅವಳು ನೇರವಾಗಿ ತನ್ನ ಭಾವನೆಯನ್ನ ವ್ಯಕ್ತಪಡಿಸುವುದಿಲ್ಲ ಎಂದನ್ನುತ್ತಾರೆ ಮನಃಶಾಸ್ತ್ರಜ್ಞೆ ಕೋರಿನ್ ಸ್ವೀಟ್....

2) ಮಾತು, ಮಾತು, ಮಾತು...
ನಮ್ಮಲ್ಲಿ ಎಲ್ಲರೂ ಅಂದುಕೊಂಡಿರುವುದು ಹೆಂಗಸರು ಹೆಚ್ಚು ಮಾತಾಡುತ್ತಾರೆ, ಗಂಡಸರು ಕಡಿಮೆ ಮಾತಾಡುತ್ತಾರೆ ಎಂದು. ಗಂಡ ಮತ್ತು ಹೆಂಡತಿಯ ನಡುವಿನ ಸಂವಾದದಲ್ಲಿ ಹೆಂಡತಿಯ ಮಾತೇ ಹೆಚ್ಚು ಎಂಬುದನ್ನ ಒಪ್ಪಲೇ ಬೇಕು. ಹೆಂಡತಿ ಹೆಚ್ಚು ಮಾತಾಡುತ್ತಾಳೆ, ಗಂಟೆಗಟ್ಟಲೆ ತಲೆಕೊರೆಯುತ್ತಾಳೆ ಎಂಬುದು ಬಹುತೇಕ ಎಲ್ಲಾ ಗಂಡಂದಿರ ಅಭಿಪ್ರಾಯವಾಗಿದೆ...

ಹೆಂಗಸರಷ್ಟೇ ಮಾತಾಡುವುದಿಲ್ಲ: ಹೆಂಗಸರೇ ಹೆಚ್ಚು ಮಾತಾಡುತ್ತಾರೆ ಎಂಬುದು ವಾಸ್ತವದಲ್ಲಿ ಸತ್ಯ ಅಲ್ಲವಂತೆ. ಮಾತಿನಲ್ಲಿ ಹೆಂಗಸಿಗಿಂತ ಗಂಡಸೇನೂ ಕಡಿಮೆ ಇಲ್ಲ. ವ್ಯತ್ಯಾಸ ಇರುವುದು ಇಬ್ಬರ ಮಾತಿನ ವಿಷಯದಲ್ಲೇ... ಗಂಡಸರು ಕ್ರಿಕೆಟು, ಬ್ಯುಸಿನೆಸ್ಸು, ಕೆಲಸ ಹೀಗೆ ಇಂಥ ವಿಷಯಗಳ ಬಗ್ಗೆ ಹೆಚ್ಚು ಆಸಕ್ತಿಯಿಂದ ಮಾತನಾಡುತ್ತಾರೆ. ಅದೇ, ಹೆಂಗಸರಾದರೆ ಗಾಸಿಪ್ಪು, ಮನೆ, ಮಕ್ಕಳು, ಭಾವನೆ ಇತ್ಯಾದಿ ವಿಷಯಗಳ ಬಗ್ಗೆ ಹೆಚ್ಚು ಮಾತನಾಡುತ್ತಾರೆ. ಹೀಗಾಗಿ, ಹೆಂಡತಿ ಮಾತನಾಡುವ ವಿಷಯ ಗಂಡನಿಗೆ ಇಷ್ಟವಾಗದೇ ಇರುವುದರಿಂದ ಪತ್ನಿಯ ಮಾತು ಅತಿಯಾಯಿತು ಎಂದನಿಸುತ್ತದಂತೆ...

ಈ ನಿಟ್ಟಿನಲ್ಲಿ ಮನಃಶಾಸ್ತ್ರಜ್ಞರು ಹೆಂಗಸರಿಗೆ ಒಂದು ಪರಿಹಾರ ನೀಡುತ್ತಾರೆ. ಹೆಣ್ಣು ತನಗಿಷ್ಟವಾದ ವಿಷಯಗಳ ಬಗ್ಗೆ ತನ್ನ ಸ್ನೇಹಿತೆಯರೊಂದಿಗೆ ಸಂಪೂರ್ಣವಾಗಿ ಹಂಚಿಕೊಂಡು, ಬಳಿಕ ಅದರ ಸಾರಾಂಶವನ್ನಷ್ಟೇ ಗಂಡನಿಗೆ ತಿಳಿಸುವುದನ್ನ ಅಭ್ಯಾಸ ಮಾಡಿಕೊಳ್ಳಬೇಕಂತೆ....

3) ನಿಮ್ಮ ಮನಸ್ಸಲ್ಲೇನಿದೆ?
ಈ ಪ್ರಶ್ನೆಯನ್ನ ಪತ್ನಿ ತನ್ನ ಗಂಡನಿಗೆ ಪದೇ ಪದೇ ಕೇಳುತ್ತಲೇ ಇರುತ್ತಾಳೆ. "ನಿಮಗೆ ಏನನಿಸುತ್ತೆ", "ನಾನು ಹೀಗೆ ಮಾಡಿದ್ರೆ ಚೆನ್ನಾಗಿ ಕಾಣುತ್ತೀನಾ", "ಯಾರ ಬಗ್ಗೆ ಯೋಚನೆ ಮಾಡುತ್ತಿದ್ದೀರಿ"... ಹೀಗೆ ನಾನಾ ಥರದಲ್ಲಿ ಗಂಡನ ಮನಸಲ್ಲಿ ಏನಿದೆ ಎಂದು ತಿಳಿದುಕೊಳ್ಳಲು ಕೆದಕುತ್ತಲೇ ಇರುತ್ತಾಳೆ... ಆಕೆಗೆ ಇದೊಂದು ಚಾಳಿ. ಗಂಡನಿಗೋ ಅದು ಕಿರಿಕಿರಿ...

ಹೆಂಗಸರ ಈ ಗುಣ ಆಕೆಯ ದೌರ್ಬಲ್ಯ... ತನ್ನ ಬಗ್ಗೆ ಸ್ವಲ್ಪಮಟ್ಟಿಗೆ ಇರುವ ಕೀಳರಿಮೆಯಿಂದ ಆಕೆ ಈ ರೀತಿ ವರ್ತಿಸುತ್ತಾಳಂತೆ. ಬೇರೆಯವರು ತನ್ನ ಬಗ್ಗೆ ಏನು ಯೋಚಿಸುತ್ತಿದ್ದಾರೆ ಎಂಬುದನ್ನ ತಿಳಿದುಕೊಳ್ಳುವ ಆಸಕ್ತಿ ಹೆಣ್ಣಿನದ್ದು. ಹೀಗಾಗಿ, ತನ್ನ ಸಂಗಾತಿಯ ಮನಸನ್ನ ಅರಿಯಲು ಯಾವಾಗಲು ಪ್ರಯತ್ನಿಸುತ್ತಿರುತ್ತಾಳೆ...

4) ಅಳು, ಅಳು, ಅಳು... ಕಣ್ಣೀರು
ಮಾತುಮಾತಿಗೂ ಹೆಂಗಸರು ಅಳುವುದನ್ನ ಕಂಡರೆ ಗಂಡಸರಿಗೆ ಅಸಾಧ್ಯ ಕಿರಿಕಿರಿ... ಏನಾದರೂ ಸ್ವಲ್ಪ ಮನಸ್ತಾಪವಾದರೂ ಸಾಕು ಹೆಂಗಸರ ಅಳುವಿನಲ್ಲಿ ಅದು ಸಮಾಪ್ತಿಯಾಗುತ್ತದೆ. ಕೆಲ ಹೆಂಗಸರು ತಮ್ಮ ಭಾವನೆಗಳಿಗೆ ಧಕ್ಕೆಯಾದರೆ ಅತ್ತುಬಿಡುತ್ತಾರೆ. ಅದು ಸಹಜವೇ... ಆದರೆ, ಇನ್ನೂ ಕೆಲ ಹೆಂಗಸರು ಬೇಕಂತಲೇ ಕಣ್ಣೀರು ಸುರಿಸಿ ಜಗಳದ ಜಯವನ್ನ ತಮ್ಮದಾಗಿಸಿಕೊಳ್ಳುತ್ತಾರೆ. ಹೆಣ್ಣಿನ ಕಣ್ಣೀರು ಗಂಡಸನ್ನ ಹತಾಶೆಗೊಳಿಸುತ್ತದೆ. ವಿಧಿಯಿಲ್ಲದೇ, ಬಲವಂತವಾಗಿ ಸೋಲೊಪ್ಪಿಕೊಳ್ಳುತ್ತಾನೆ. ಹೆಣ್ಣು ಕಣ್ಣೀರು ಹಾಕಿ ಗೆಲ್ಲುತ್ತಾಳೆ...

5) ಮಾತು ಕೇಳಿಸಿಕೊಳ್ಳೋದೇ ಇಲ್ಲ....
ಇದು, ಗಂಡಸರ ವಿರುದ್ಧ ಹೆಂಗಸರು ಮಾಡುವ ಪ್ರಮುಖ ಕಂಪ್ಲೇಂಟು... ಹೆಂಡತಿ ಮಾತಾನಾಡುತ್ತಲೇ ಇದ್ದರೂ ಗಂಡ ಅನ್ಯಮನಸ್ಕನಾಗಿ ಕೇಳಿಸಿಕೊಳ್ಳುತ್ತಿರುತ್ತಾನೆ. ಹೀಗಾಗಿ, ಹೆಂಡತಿಗೆ ನೀರಿನ ಮೇಲೆ ಹೋಮ ಮಾಡಿದ ಅನುಭವವಾಗುತ್ತದೆ. ಇದಕ್ಕೆ ಪ್ರಮುಖ ಕಾರಣವೇನೆಂದರೆ, ಹೆಂಗಸರಂತೆ ಗಂಡಸರು ಬಹುಕಾರ್ಯಗಳನ್ನ ಮಾಡಲು ಸಾಧ್ಯವಿಲ್ಲ. ಹೆಂಗಸರು ಏಕಕಾಲದಲ್ಲಿ ಒಂದಕ್ಕಿಂತ ಹೆಚ್ಚು ಕೆಲಸ ಮಾಡಬಲ್ಲರು. ಟಿವಿ ನೋಡುತ್ತಿರುವಾಗಲೇ ಅಡುಗೆ ಮಾಡಬಲ್ಲರು, ಓದಬಲ್ಲರು, ಮಾತನಾಡಬಲ್ಲರು... ಆದರೆ, ಗಂಡಸರು ಹಾಗಲ್ಲ, ಅವರು ಏಕಕಾಲದಲ್ಲಿ ಒಂದೇ ಕೆಲಸ ಮಾಡಬಲ್ಲರು. ಆಸಕ್ತಿಯಿಂದ ಟಿವಿ ನೋಡುವಾಗ ಯಾರೊಂದಿಗೂ ಮಾತನಾಡಲು ಆಗುವುದಿಲ್ಲವಂತೆ. ಹೀಗಾಗಿ, ಗಂಡಸರೊಂದಿಗೆ ಮಾತನಾಡುವ ಮುಂಚೆ ಆತ ಮಾಡುತ್ತಿರುವ ಕೆಲಸ ಮುಗಿಯುವವರೆಗೂ ಕಾಯುವುದು ಒಳ್ಳೆಯದು ಎನ್ನುತ್ತಾರೆ ತಜ್ಞರು....