Powered By Blogger

Sunday 16 October 2011

ರಾಜ್ಯವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವಂತೆ `ಅಲ್ಲಾಹು’ ವಿನಲ್ಲಿ ಪ್ರಾರ್ಥಿಸಿ ಎಂದು ಹಜ್ ಯಾತ್ರಿಕರಿಗೆ ಮನವಿ ಮಾಡಿದ ಸಿ.ಎಂ



haj flight (file photo)
 ಬೆಂಗಳೂರು: ಸಮುದಾಯದವರು ಹಜ್ ಯಾತ್ರೆ ಕೈಗೊಂಡಿರುವುದು ತುಂಬಾ ಸಂತೋಷವಾಗಿದೆ. ರಾಜ್ಯವು ಬರಗಾಲ, ವಿದ್ಯುತ್ ಕ್ಷಾಮದಿಂದ ತತ್ತರಿಸಿದೆ. ರಾಜ್ಯವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವಂತೆ `ಅಲ್ಲಾಹು’ ವಿನಲ್ಲಿ ಪ್ರಾರ್ಥಿಸಿ ಎಂದು ಮುಖ್ಯಮಂತ್ರಿ ಡಿ.ವಿ. ಸದಾನದ ಗೌಡ ಇಲ್ಲಿ ಮನವಿ ಮಾಡಿದರು.ಕರ್ನಾಟಕ ರಾಜ್ಯ ಹಜ್ ಸಮಿತಿಯು ನಗರದ ಬೆನ್‌ಸನ್ ಟೌನ್‌ನ ಈದ್ಗಾ ಮೈದಾನದಲ್ಲಿ ಭಾನುವಾರ ಏರ್ಪಡಿಸಿದ್ದ ಹಜ್ ಯಾತ್ರಿಗಳಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.ನಗರದಲ್ಲಿ ಉದ್ದೇಶಿತ ಹಜ್ ಭವನ ನಿರ್ಮಾಣಕ್ಕೆ ಡಿಸೆಂಬರ್ ಮೊದಲ ವಾರದಲ್ಲಿ ಶಂಕುಸ್ಥಾಪನೆ ನೆರವೇರಿಸಲಾಗುವುದು .ಸರ್ಕಾರದ ವತಿಯಿಂದ ಈಗಾಗಲೇ ಯಲಹಂಕ ಹೋಬಳಿಯ ತಿರುಮೇನಹಳ್ಳಿ ಗ್ರಾಮದಲ್ಲಿ 3.17 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಭವನ ನಿರ್ಮಾಣದ ಕಾಮಗಾರಿ ಆರಂಭವಾಗಬೇಕಿತ್ತು. ಕಾರಣಾಂತರಗಳಿಂದ ವಿಳಂಬವಾಗಿದೆ.ಶೀಘ್ರದಲ್ಲೇ ಕಾಮಗಾರಿಗೆ ಚಾಲನೆ ನೀಡಲಾಗುವುದು` ಎಂದು ಹೇಳಿದರು.
ಭವನ ನಿರ್ಮಾಣಕ್ಕಾಗಿ ಸರ್ಕಾರ 40 ಕೋಟಿ ರೂಪಾಯಿ ಅನುದಾನ ಮೀಸಲಿಟ್ಟಿದೆ. ಈಗಾಗಲೇ 15 ಕೋಟಿ ರೂಪಾಯಿಗಳನ್ನು ನೀಡಿದ್ದು, ಉಳಿದ 25 ಕೋಟಿ ರೂಪಾಯಿಗಳನ್ನು ನಂತರದ ದಿನಗಳಲ್ಲಿ ಬಿಡುಗಡೆ ಮಾಡಲಾಗುವುದು. ನಿರ್ಮಾಣಕ್ಕೆ ಹೆಚ್ಚಿನ ಹಣದ ಅವಶ್ಯಕತೆ ಎದುರಾದರೆ ಹಣ ನೀಡುವುದಾಗಿಯೂ ಭರವಸೆ ನೀಡಿದರು.ಬಜೆಟ್‌ಗೂ ಮುನ್ನ ಚರ್ಚೆ: ಮುಂದಿನ ಬಜೆಟ್ ವೇಳೆ ಸಮುದಾಯದ ಚುನಾಯಿತ ಪ್ರತಿನಿಧಿಗಳು ಹಾಗೂ ಮುಖಂಡರೊಂದಿಗೆ ಪೂರ್ವಭಾವಿಯಾಗಿ ಚರ್ಚಿಸುತ್ತೇನೆ. ನಂತರ ಸಮುದಾಯಕ್ಕೆ ಅವಶ್ಯಕವಾದ ಅನುದಾನ ನೀಡಲು ಕ್ರಮ ತೆಗೆದುಕೊಳ್ಳುತ್ತೇನೆ. ಬಜೆಟ್‌ನಲ್ಲಿ ಸಾಧ್ಯವಾದಷ್ಟು ಹೆಚ್ಚಿನ ಅನುದಾನ ನೀಡಲು ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು.
ಮಧ್ಯವರ್ತಿಗಳಿಗೆ ಎಚ್ಚರಿಕೆ: ಅಲ್ಪಸಂಖ್ಯಾತ ಸಮುದಾಯಗಳ ಅಭಿವೃದ್ಧಿಗೆ ಬಿಡುಗಡೆಯಾದ ಅನುದಾನ ಕಟ್ಟ ಕಡೆಯ ವ್ಯಕ್ತಿಯನ್ನು ತಲುಪುತ್ತಿಲ್ಲ. ಅನುದಾನ ಮಧ್ಯವರ್ತಿಗಳ ಪಾಲಾಗುತ್ತಿರುವುದು ಗಮನಕ್ಕೆ ಬಂದಿದೆ. ಸಮುದಾಯಗಳ ಕಲ್ಯಾಣಕ್ಕೆ ಮೀಸಲಿಟ್ಟ ಹಣವನ್ನು ಮಧ್ಯವರ್ತಿಗಳ ಪಾಲಾಗಲು ಬಿಡುವುದಿಲ್ಲ. ಮುಂದಿನ ದಿನಗಳಲ್ಲಿ ಹಣ ಸೋರಿಕೆಯಾಗದಂತೆ ಕಟ್ಟು ನಿಟ್ಟು ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದ ಅವರು, ಈ ಮೂಲಕ ಮಧ್ಯವರ್ತಿಗಳಿಗೆ ಎಚ್ಚರಿಕೆ ನೀಡಿದರು.ಬಕ್ರೀದ್ ಆಚರಣೆಗೆ ರಕ್ಷಣೆ: ಬಕ್ರೀದ್ ಹಬ್ಬದ ಆಚರಣೆ ವೇಳೆ ಮುಸ್ಲಿಂ ಸಮುದಾಯಗಳ ಮೇಲೆ ಹಲ್ಲೆಗಳು ನಡೆಯುತ್ತವೆ. ಈ ಸಂಬಂಧ ಸರ್ಕಾರ ಸೂಕ್ತ ರಕ್ಷಣೆ ನೀಡಬೇಕು ಎಂಬ ಶಾಸಕ ಆರ್.ರೋಷನ್ ಬೇಗ್ ಅವರ ಮನವಿಗೆ ಪ್ರತಿಕ್ರಿಯಿಸಿದ ಅವರು, ಹಬ್ಬದ ವೇಳೆ ಯಾವುದೇ ಅಹಿತಕರ ಘಟನೆ ಜರುಗದಂತೆ ಸಮುದಾಯಕ್ಕೆ ರಕ್ಷಣೆ ನೀಡುತ್ತೇವೆ ಎಂದರು. 

No comments:

Post a Comment