Powered By Blogger

Sunday 18 December 2011

ವಿಧಾನ ಸಭೆಯಲ್ಲಿ ಯುವತಿಯರ ಅಪಹರಣ ಪ್ರಕರಣ ಪ್ರಸ್ತಾಪಿಸಿದ ಮಲ್ಲಿಕಾ ಪ್ರಸಾದ್ , ಲವ್ ಜಿಹಾದಿಗೆ ಮರು ಜೀವ ?


Posted on  by ವಿಶ್ವ ಕನ್ನಡಿಗ ನ್ಯೂಸ್

ಬೆಂಗಳೂರು :ವಿಧಾನ ಸಭೆಯಲ್ಲಿ ಯುವತಿಯರ ಅಪಹರಣ ಪ್ರಕರಣ ಪ್ರಸ್ತಾಪಿಸಿದ ಪುತ್ತೂರು ಶಾಸಕಿ ಮಲ್ಲಿಕಾ ಪ್ರಸಾದ್ ಹೇಳಿಕೆಯಿಂದ  ಕರಾವಳಿ ಜಿಲ್ಲೆಯ ಬಿಜೆಪಿ ಸದಸ್ಯರು ಮತ್ತು ಕಾಂಗ್ರೆಸ್ ಸದಸ್ಯರು ಪರಸ್ಪರ ಮಾತಿನ ಚಕಮಕಿ ನಡೆಸಿದರು. ಬಿಜೆಪಿ ಸದಸ್ಯರು ಹಿಂದು ಯುವತಿಯರನ್ನು ಮುಸ್ಲಿಂ ಯುಕವರು ನಂಬಿಸಿ ಮತಾಂತರ ಮಾಡುತ್ತಿದ್ದಾರೆ ಎಂದು ಆಪಾದಿಸಿದರೆ, ಕಾಂಗ್ರೆಸ್ ಸದಸ್ಯರು ಕೋಮುಭಾವನೆ ಪ್ರಚೋದಿಸುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಶೂನ್ಯ ವೇಳೆಯಲ್ಲಿ ಪುತ್ತೂರು ಶಾಸಕಿ ಮಲ್ಲಿಕಾ ಪ್ರಸಾದ್ ವಿಷಯ ಪ್ರಸ್ತಾಪಿಸಿ, ಕರಾವಳಿ ಜಿಲ್ಲೆಗಳಲ್ಲಿ ಯುವತಿಯರ ಅಪಹರಣ ಪ್ರಕರಣಗಳು ಹೆಚ್ಚಾಗಿವೆ. ಈ ವರ್ಷದ ಜನವರಿಯಿಂದ ನವೆಂಬರ್ ಅಂತ್ಯಕ್ಕೆ ೮೪ ಯುವತಿಯರು ನಾಪತ್ತೆಯಾಗಿದ್ದಾರೆ. ಇವರಲ್ಲಿ ೬೯ ಯುವತಿಯರು ಕಾಣಿಸಿಕೊಂಡಿದ್ದು, ಅವರೆಲ್ಲರೂ ಪ್ರೀತಿ, ಪ್ರೇಮದ ಬಲೆಗೆ ಬಿದ್ದಿರುವುದು ಕಂಡು ಬಂತು. ಅಲ್ಲದೇ ಇದೇ ಸೋಗಿನಲ್ಲಿ ಯುವಕರು ಯುವತಿಯರ ಮಾರಾಟದಲ್ಲೂ ತೊಡಗಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಉಪಸಭಾಧ್ಯಕ್ಷ ಯೋಗೀಶ್ ಭಟ್, ಸರ್ಕಾರ ಈ ಬಗ್ಗೆ ಗಂಭೀರ ಕ್ರಮ ಜರುಗಿಸಬೇಕು. ಇದೊಂದು ಸಮಸ್ಯೆಯಾಗಿದೆ ಎಂದು ಹೇಳಿದರು. ಇದಕ್ಕೆ ಕಾಂಗ್ರೆಸ್‌ನ ರಮಾನಾಥ ರೈ, ಇದು ಕೋಮು ಸೌಹಾರ್ದತೆ ಹದಗೆಡಿಸುವ ಪ್ರಯತ್ನವಾಗಿದೆ. ಜಾನುವಾರುಗಳನ್ನು ಸಾಗಿಸಲಾಗುತ್ತಿದೆ ಎಂದು ಆಪಾದಿಸಿ ಹಲ್ಲೆ ನಡೆಸಲಾಗುತ್ತಿದೆ. ಹೀಗೆ ಹಲ್ಲೆಗೊಳಗಾದವರು ಆಸ್ಪತ್ರೆಯಲ್ಲಿ ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಯಾರೂ ಕಾನೂನನ್ನು ಕೈಗೆತ್ತಿಕೊಳ್ಳಬಾರದು ಎಂದು ಒತ್ತಾಯಿಸಿದರು. ಇದಕ್ಕೆ ಅಭಯ್ ಚಂದ್ರಜೈನ್ ಮತ್ತಿತರರು ಧನಿಗೂಡಿಸಿದರು.
ಸುಳ್ಯ ಶಾಸಕ ಎಸ್. ಅಂಗಾರ, ಲವ್ ಜಿಹಾದಿ ಹೆಸರಿನಲ್ಲಿ ಹಿಂದೂ ಯುವತಿಯರ ಅಪಹರಣ ನಡೆಯುತ್ತಿದೆ. ನಿನ್ನೆ ನಮ್ಮ ಕ್ಷೇತ್ರದಲ್ಲಿ ಇಂತಹ ಪ್ರಕರಣದ ಬಗ್ಗೆ ಮಾಹಿತಿ ನೀಡಲು ಮುಂದಾದಾಗ ಚುನಾಯಿತ ಪ್ರತಿನಿಧಿ ಮೇಲೆ ಪೊಲೀಸರು ಪ್ರಕರಣ ದಾಖಲಿಸಿ ಹಲ್ಲೆ ನಡೆಸಿದ್ದಾರೆ ಎಂದು ದೂರಿದರು. ಸುಳ್ಯದಲ್ಲಿ ನಡೆದ ಜಾರ್ಖಂಡ್ ಮೂಲದ ವೇಶ್ಯಾವೃತ್ತಿ ಯುವತಿಯರ ಜೊತೆಗೆ ಸಿಕ್ಕಿ ಬಿದ್ದ ಮುಸ್ಲಿಂ ಯುವಕರ ವಿಷಯ ಮುಂದಿಟ್ಟು ಈ ಮೂಲಕ ಲವ್ ಜಿಹಾದ್ ವಿಷಯಕ್ಕೆ ಮತ್ತೆ ಜೀವ ತುಂಬುವ ಪ್ರಯತ್ನವನ್ನು ಅಂಗಾರ  ಮಾಡಿದರು.
ಕಳೆದ ಬಾರಿ ಸಹ ಜಿಲ್ಲೆಯಲ್ಲಿ ಇದೇ ರೀತಿ ಹುಡುಗಿಯರು ಲವ್ ಜಿಹಾದಿಗೆ ಸಿಕ್ಕಿ ಪರಾರಿಯಾಗಿದ್ದಾರೆ ಎಂದು ಇದೇ ಸಂಘಟನೆಗಳು ಆರೋಪಿಸಿದಾಗ ಬರೋಬ್ಬರಿ ಸುಮಾರು ಇಪ್ಪತ್ತೆಂಟು ಯುವತಿಯರ ಲವ್ ಮಾಡಿ  ಅತ್ಯಾಚಾರ ನಡೆಸಿ ಕೊಲೆ ಮಾಡಿದ್ದ ಸರಣಿ ಹಂತಕ ಸಯನೈಡ್ ಮೋಹನ ಸಿಕ್ಕಿ ಬಿದ್ದದ್ದನ್ನು ಸ್ಮರಿಸಬಹುದು . ಇದೀಗ ಮತ್ತೆ ಲವ್ ಜಿಹಾದಿಗೆ ಜೀವ ತುಂಬುವ ಮರು ಪ್ರಯತ್ನಗಳು ನಡೆಯುತ್ತಿವೆ .

ಪುತ್ತೂರು ಜಯಂತ್‌ ರೈ ಕೊಲೆ ಆರೋಪಿ ಖುಲಾಸೆ


Posted on  by ಸಲೀಂ,ಅಮ್ಚಿನಡ್ಕ,ಪುತ್ತೂರು.

ಪುತ್ತೂರು ರಾಜಕೀಯವಲಯದಲ್ಲಿ ಅಲ್ಲೋಲಕಲ್ಲೋಲವನ್ನುಂಟುಮಾಡಿದ ಜಯಂತ್ ರೈ ಯವರು ಇನ್ನೋಮ್ಮೆ ಸುದ್ದಿಯಾಗಿದ್ದಾರೆ. ಹದಿನೇಳು ವರ್ಷಗಳ ಹಿಂದೆ ಸಂಭವಿಸಿದ ಕೊಲೆ ಪ್ರಕರಣದ ಆರೋಪಿ ಭೂಗತ ಪಾತಕಿ ಫ್ರಾನ್ಸಿಸ್‌ ಸಿಲ್ವೆಸ್ಟರ್ ಕುಟಿನ್ಹೋನನ್ನು ಪುತ್ತೂರಿನ ತ್ವರಿತಗತಿ ನ್ಯಾಯಾಲಯ ಖುಲಾಸೆಗೊಳಿಸಿದೆ. 1994 ನ. 24 ರಂದು ಪುತ್ತೂರು ಬ್ಲಾಕ್‌ ಕಾಂಗ್ರೆಸ್‌ ಕಚೇರಿ ಬಳಿ ಆಗಿನ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಕೆ.ಪಿ. ಅಬ್ದುಲ್ಲಾ, ಮೂಸ ಕುಂಞಿ ಮತ್ತು ಯುವ ಕಾಂಗ್ರೆಸ್‌ ಜಿಲ್ಲಾ ಉಪಾಧ್ಯಕ್ಷ ಜಯಂತ್‌ ರೈ ಅವರು ನಿಂತು ಚರ್ಚಿಸುತ್ತಿದ್ದಾಗ ಸುನಿಲ್‌ ಡಿ’ಸೋಜಾ ಎಂಬಾತ ಬಂದು ಪಿಸ್ತೂಲಿನಿಂದ ಜಯಂತ್‌ ರೈ ಅವರ ತಲೆಯ ಹಿಂಭಾಗಕ್ಕೆ ಗುಂಡು ಹಾರಿಸಿದ್ದ. ಓಡಿ ತಪ್ಪಿಸಿಕೊಳ್ಳಲೆತ್ನಿಸಿದ್ದ ಸುನಿಲ್‌ ಡಿ’ಸೋಜಾನನ್ನು ಮೂಸಾ ಕುಂಞಿ ಮತ್ತು ಇತರರು ಸೇರಿ ಹಿಡಿದಿಟ್ಟು ಪೊಲೀಸರಿಗೆ ಒಪ್ಪಿಸಿದ್ದರು. ತೀವ್ರ ಗಾಯಗೊಂಡಿದ್ದ ಜಯಂತ್‌ ರೈ ಚಿಕಿತ್ಸೆ ಫಲಕಾರಿಯಾಗದೆ ಅದೇ ತಿಂಗಳ 27 ರಂದು ಸಾವನ್ನಪ್ಪಿದ್ದರು. ಪುತ್ತೂರು ಪೊಲೀಸ್‌ ಠಾಣೆಯಲ್ಲಿ ಪ್ರಾನಂಭದಲ್ಲಿ ಕೊಲೆ ಯತ್ನ ಮತ್ತು ಬಳಿಕ ಕೊಲೆ ಕೇಸು ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಈ ಹಿಂದೆ ಮಂಗಳೂರಿನಲ್ಲಿ ನಡೆದಿದ್ದ ಅಮರ್ ಆಳ್ವ ಕೊಲೆಗೆ ಪ್ರತೀಕಾರವಾಗಿ ಜಯಂತ್‌ ರೈ ಕೊಲೆ ನಡೆದಿದೆ ಮತ್ತು ಆರೋಪಿ ಸುನಿಲ್‌ ಡಿ’ಸೋಜಾ ಭೂಗತ ಪಾತಕಿಗಳಾದ ಫ್ರಾನ್ಸಿಸ್‌ ಕುಟಿನ್ಹೊ ಮತ್ತು ರಮೇಶ್‌ ಪೂಜಾರಿ ಸೂಚನೆ ಮೇರೆಗೆ ಈ ಕೃತ್ಯವನ್ನು ಎಸಗಿದ್ದಾನೆ ಎಂಬ ತೀರ್ಮಾನಕ್ಕೆ ಬಂದಿದ್ದರು. ಈ ಹಿನ್ನೆಲೆಯಲ್ಲಿ ಫ್ರಾನ್ಸಿಸ್‌ ಡಿ’ಸೋಜಾ, ರಮೇಶ್‌ ಪೂಜಾರಿ ಮತ್ತು ಸುನಿಲ್‌ ಡಿ’ಸೋಜಾ ಅವರನ್ನು ಆರೋಪಿಗಳನ್ನಾಗಿ ಹೆಸರಿಸಿ ದೋಷಾರೋಪಣ ಪಟ್ಟಿಯನ್ನು ತನಿಖಾಧಿಕಾರಿಯಾಗಿದ್ದ ಡಿ.ವೈ.ಎಸ್‌.ಪಿ. ಅವರು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಈ ಪ್ರಕರಣದ ವಿಚಾರಣೆ ಮುಂದುವರಿಯುತ್ತಿದ್ದಾಗಲೇ ಸುನಿಲ್‌ ಡಿ’ಸೋಜಾ ಕೊಲೆಯಾಗಿದ್ದ ಹಾಗೂ ಇತರ ಆರೋಪಿಗಳ ವಿರುದ್ಧದ ಕೇಸು ಖುಲಾಸೆಗೊಂಡಿತ್ತು. ಆದರೆ ಆಗ ತಲೆ ಮರೆಸಿಕೊಂಡಿದ್ದ ಫ್ರಾನ್ಸಿಸ್‌ ಕುಟಿನ್ಹೋನನ್ನು ಬೇರೆ ಪ್ರಕರಣದಲ್ಲಿ ಉತ್ತರ ಪ್ರದೇಶದಲ್ಲಿ ಬಂಧಿಸಿದ್ದು, ತನಿಖೆಗೆ ಬಾಕಿ ಇದ್ದ ಜಯಂತ್‌ ರೈ ಪ್ರಕರಣಕ್ಕಾಗಿ ನ್ಯಾಯಾಲಯದ ಬಾಡಿ ವಾರಂಟ್‌ನಲ್ಲಿ ಮಂಗಳೂರಿಗೆ ಕರೆ ತರಲಾಗಿತ್ತು. ಇತ್ತೀಚೆಗೆ ಈ ಪ್ರಕರಣದ ವಿಚಾರಣೆ ನಡೆಸಿದ ಪುತ್ತೂರಿನ ತ್ವರಿತಗತಿ ನ್ಯಾಯಾಲಯ‌ದ ನ್ಯಾಯಾಧೀಶರಾದ ಶಿವ ಶಂಕರೇ ಗೌಡ ಅವರು ಸಾಕ್ಷಿಗಳ ವಿಚಾರಣೆ ನಡೆಸಿ ಆರೋಪ ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಶನ್‌ ವಿಫಲವಾಗಿದೆ ಎಂಬ ತೀರ್ಮಾನಕ್ಕೆ ಬಂದು ಆರೋಪಿ ಫ್ರಾನ್ಸಿಸ್‌ ಸಿಲ್ವೆಸ್ಟರ್ ಕುಟಿನ್ಹೋನನ್ನು ಖುಲಾಸೆಗೊಳಿಸಿ ತೀರ್ಪಿತ್ತರು.